Thursday, January 12, 2017

ಯದ್ ಭಾವಂ ತದ್ ಭವತಿ

ಹೊರಗೆ ಮಣ್ಣಿನ ಬಿಂಬ 
ಮನಸೊಳಗೆ ಪ್ರತಿಬಿಂಬ !
ಯದ್ ಭಾವಂ ತದ್ ಭವತಿ !

ಆಂತರ್ಯ

ಬೆಳಕೆಂಬುದು ಅವನಿರುವಿಕೆಯ ಪ್ರತೀಕ
ಬುದ್ದಿಯ ಕ್ಷಮತೆಗೆ ಎಟುಕದು ಯಾತ್ರಿಕ 
ಕಾಣಿಸುವುದೇ ಕತ್ತಲಾದ ಬಳಿಕ ನೆರಳು 
ಆಂತರ್ಯ ತಿಳಿಯದೆ ಇರುವಿಕೆಯ ತಿರುಳು !!
--ಸುಬ್ಬು ಪದ್ಮನಾಭ್

ಜೀವನೋತ್ಸಾಹ

ಬದುಕಿನಲಿ ಹಲವನುಭ ರಸಪಾಕ ಜೊತೆಯಿರಲಿ
ಬಾಹು ಭುಜಗಳಿಗೆ ಕಡೆತನಕ ಬಲವಿರಲಿ
ಜೀವನವೆಂಬ ವಿಶ್ವ ವಿದ್ಯಾಲಯವ ಪ್ರೀತಿಸಲಿ
ದೈವಕೃಪೆ ಜೀವನೋತ್ಸಾಹ ಮಿನುಗುತಿರಲಿ !!

-ಸುಬ್ಬು ಪದ್ಮನಾಭ್
 

ಮಿಗೆ

ಅವಿತ ಭಯ ತೆಗೆ 
ಜೀವನ ಪ್ರೀತಿ ಉಗೆ 
ಮನದ ನವಿಲು ನಗೆ 
ಸನಿಹ ನೀನಿರೆ ಮಿಗೆ

-ಸುಬ್ಬು ಪದ್ಮನಾಭ್

ಅಮ್ಮ

🙏
ಲೋಕಕ್ಕೆ ಬಂದ ಮೇಲೆ ನೀ ಕಲಿಸಿದ ಮೊದಲ ಪಾಠ
ಮರೆತಿಲ್ಲ ವರ್ಷವಿಡೀ ನೀನಿತ್ತ ಅಮೃತ ದ್ರವ್ಯದೂಟ 
ಒಡಲನ್ನೇ ಅಡುಗೆಮನೆಯಾಗಿಸಿ ಎನಗೆ ಉಣಬಡಿಸಿದೆ 
ನಿನ್ನ ಮಮತೆಯನ್ನು ಧಾರೆಯಾಗಿ ನನ್ನೆಡೆಗೆ ಹರಿಸಿದೆ 
ಜನ್ಮ ನೂರೆತ್ತಿ ಬಂದರೂ ನಿನ್ನ ಋಣ ತೀರಿಸಲಾದೀತೆ !!

-ಸುಬ್ಬು ಪದ್ಮನಾಭ್

ಸ್ಪರ್ಶ

ರವಿಯ ಕಿರಣಗಳ ಸ್ಪರ್ಶದಿಂದಲ್ಲವೇ 
ನೆಚ್ಚಗಾಗುವುದು ಸಮಸ್ತ ಜೀವಿತವು

ಸ್ವ ಸ್ವರೂಪ ಪರಚೇತನ ಬೆಳಕಿನಾಗಸದಿ 
ಶಕ್ತಿ ಸಂತಸ ಉಕ್ಕಿ ಚಿಮ್ಮುವುದು ಮನದಿ 

ಸಹಸ್ರ ವರುಷ ಕಳೆದರೇನು ಬೆಳಕಿಗೆ
ತೆನೆಗೆ ಸ್ಪರ್ಶ ಬೇಡವೇ ತಂಡುಲ ಪ್ರಾಪ್ತಿಗೆ

ಜಗದಲ್ಲೊಬ್ಬ ರವಿ ಸಾಕು ಸಕಲ ಜೀವರಾಶಿಗೆ
ಒಡಲರಮನೆಗೆ ಬೇಕಿರುವ ಚೇತನವಿದು ಮಿಗೆ !

-ಸುಬ್ಬು ಪದ್ಮನಾಭ್