Friday, October 25, 2019

ಇಂದಿಗೆ ಮೂರು ವರ್ಷ - ಆಶ್ವಯಜ ಬಹುಳ ತೃತೀಯ


ನೀನೊಬ್ಬ ಉತ್ತಮ ಮಗನಾಗಿ , ದೇವತೆಯಂತ ಹೆಂಡತಿಗೆ ಪ್ರೀತಿ ತೋರುವ ಗಂಡನಾಗಿ, ನನ್ನಮ್ಮ ತೀರಿಕೊಂಡ ಮೇಲೆ ಎರಡನೇ ಮದುವೆ ಮಾಡಿಕೊಳ್ಳುವ ಸಲಹೆಗಳನ್ನು ತಿರಸ್ಕರಿಸಿ ೫ ಜನ ಮಕ್ಕಳಿಗೆ ತಾಯಿ ಮತ್ತು ತಂದೆಯಾಗಿ, ಕಷ್ಟ ಪಟ್ಟು ೧೨-೧೩ ಗಂಟೆಗಳು ಕಬ್ಬಿಣದ ಕೆಲಸ ಮಾಡಿ ೫ ಮಕ್ಕಳನ್ನು ಸಾಕಿ ಸಲುಹಿ, ಒಬ್ಬರ ಹತ್ತಿರ ಒಂದು ಪೈಸೆ ಕೇಳದೆ ಮಕ್ಕಳನ್ನೂ ಸ್ನೇಹದಿ ಲಾಲಿಸಿ ಪಾಲಿಸಿದ ತಂದೆಯಾಗಿ, ಮೊಮ್ಮಕ್ಕಳ ಯೋಗಕ್ಷೇಮವನ್ನು ಕಾಯುವ ತಾತನಾಗಿ ಎಲ್ಲಾ ಪಾತ್ರಗಳನ್ನೂ ಆಚ್ಚುಕಟ್ಟಾಗಿ ಮಾಡಿ ಮುಗಿಸಿ ಹೊರಟೆ . 
ಯಾರು ಎಷ್ಟು ಹಂಗಿಸಿದರೂ ಪ್ರತ್ಯುತ್ತರ ಕೊಡದೆ ಹೇಗಿದ್ದೆ ಅಂತ ನನಗೆ ಅವತ್ತಿಗೆ ತಿಳಿಯುತ್ತಿರಲಿಲ್ಲ ...ಕಾಲ ಕಳೆಯುತ್ತಾ ಬದುಕೇ ನನಗೆ ಅದರ ಮರ್ಮ ಕಲಿಸಿತು. ಯಾರು ಎಷ್ಟು ಹಿಂದೆ ಮಾತನಾಡಿಕೊಂಡರು ನಿನ್ನ ಎದುರೇ ನಿನ್ನನ್ನು ಪೆದ್ದ ಅಂದಿದ್ದೂ ನೋಡಿದೀನಿ ಕೇಳಿಸ್ಕೊಂಡಿದೀನಿ , ನಿನ್ನ ಪ್ರತ್ಯುತ್ತರ ನನ್ನ ಜೀವನಕ್ಕೇ ಮರೆಯದಂತಾ ಪಾಠ ಆಗೋಯ್ತಲ್ಲ ತಂದೆ . ನಾಳೆ ನೀನು ಓದಿ ಬರಹ ಕಲ್ತ ಮೇಲೆ ಯಾರು ಏನು ಅನ್ನಲ್ಲಪ್ಪ . ಅವರೇ ಗೌರವ ಕೊಡ್ತರೆ ಆ ದಿನಗಳೂ ಬರುತ್ತೆ ನೀನು ನೋಡ್ತೀಯ ನಾನು ನೋಡ್ತೀನಿ ಅಂತಿದ್ದೆ .
ನೋವಾದಾಗ ಸಂಕಟವಾದಾಗ ಜನರ ತುಚ್ಛ ಮಾತುಗಳನ್ನು ಕೇಳಿ ಬೇಸರವಾದಾಗ ಏನೂ ಗೊತ್ತಾಗಲ್ಲ ಅನ್ನೋ ತರಾ ಆ ಜಾಗ ಬಿಟ್ಟು ಬರ್ತಾ ಇದ್ದೆ . ಗೃಹವಸ್ತು ಭಂಡಾರಕ್ಕೆ ನಾವಿಬ್ರು ಮನೆಯ ದಿನಸಿ ತರಲು ಹೋಗುವಾಗ ನಾನು ನಿನ್ನನ್ನು ಪ್ರಶ್ನಿಸುತ್ತಿದ್ದೆ . ... ನಿನ್ನಿಂದ ಉತ್ತರ ಬರುತಿತ್ತು ಗೊತ್ತಾ ? 
ಅವರ್ಯಾರೋ ಏನೋ ಅಂದ್ರು ಅಂತ ನಮ್ಮ ಮನಸ್ಸಿನ ನೆಮ್ಮದಿ ಕಳ್ಕೊಬಾರ್ದು ರಾಜ ,, ಅಂದವನೇ ದೊಡ್ಡವನಾಗಲಿ ಬಿಡಪ್ಪ ... ನೀನು ಓದು ಬರ್ಯೋ ತನಕ ಅಷ್ಟೇ ... ಆಮೇಲೆ ಯಾರು ಮಾತನಾಡಲ್ಲ ನೋಡ್ತಾ ಇರು ಅಂತಿದ್ದೆ .
ಅಷ್ಟೇ ಸಾಕು ನನಗೆ ಪುಸ್ತಕದ ಹುಳು ತರಹ ಆಗಿಬಿಟ್ಟೆ. ಎಲ್ಲದರಲ್ಲಿ 85 ಮೇಲೆಯೇ ಅಂಕಗಳು ....ಅವತ್ತೇ ನಿರ್ಧಾರ ಮಾಡ್ದೆ . ನಿನಗೆ ಹೇಗೆ ಬೇಕೋ ಹಾಗೇ ಇರ್ತೀನಿ ... ಅಂತ . ನನ್ನ ಸುತ್ತಾ ಮುತ್ತಾ ಇರುವ ಸಮಾಜ ನಿನ್ನನ್ನು ಆಡಬಾರದು ಹಾಗೇ ಮಾಡೋದೇ ನನ್ನ ಜೀವನದ ಗುರಿಯಾಗ್ಲಿ ಬಿಡಣ್ಣ ಅಂದಿದ್ದೆ . ನನಗೆ ವಯಸ್ಸು ೧೨ ಆಗ . ನೆನಪಿದ್ಯಪ್ಪಾ ?
ನಿನಗೆ Cancer ಕೇವಲ ನೆಪವಾಯಿತು ಆದರೆ ನನಗೆ ಅದೇ ದೇವರು ಕೊಟ್ಟ ಆಜ್ಞೆಯಾಯಿತು, ಅಪ್ಪನನ್ನು ಹೋಗಿ ನೋಡಿಕೊ ನಾನು ನಿನಗೆ ಅವಕಾಶ ಕೊಡುತ್ತಿದ್ದೇನೆ ಎಂದು ಅಂತರಾತ್ಮ ಒದ್ದಾಡುತ್ತಿತ್ತು .ನಿನ್ನ ಸೇವೆ ಮಾಡಲು ಅವಕಾಶ ಕೊಟ್ಟ ಪರಮಾತ್ಮನನ್ನ ಇದಕ್ಕೆ ಪ್ರತಿ ನಿತ್ಯ ಸ್ತುತಿಸಿ ಧನ್ಯವಾದ ಅರ್ಪಿಸುತ್ತಿದ್ದೇನೆ. 
ಭೂಮಿಯ ಮೇಲೆ ಈಗ ಅದು ಮೂರು ವರ್ಷವಾಯಿತು ಅಪ್ಪ . ಸಿನಿಮಾ ಹೀರೋಗಳು ನನ್ನ ಬದುಕಿಗೆ ಆದರ್ಶ ಆಗಲಿಲ್ಲ , ನೀನು ನನ್ನ ಬದುಕಿಗೆ ನಿಜವಾದ ಹೀರೋ -ಆದರ್ಶ.
ನೀನು ಹೇಳಿಕೊಟ್ಟ ಪಾಠ ನಡೆದುಕೊಂಡ ರೀತಿ ತೋರಿಸಿಕೊಟ್ಟ ಆದರ್ಶ ನನ್ನ ಹೃದಯದಲ್ಲಿ ಚಿಗುರೊಡೆದು ಹೆಮ್ಮರವಾಗಿ ಬೆಳೆಯುತ್ತಿದೆ . ನೀನು ನನ್ನ ಅಪ್ಪನಾಗಿ ನನ್ನ ಪಾಲಿಗೆ ದೇವರ ಸಮನಾಗಿಬಿಟ್ಟೆ . ದಿನ ಕಳೆದಂತೆ ನಿನ್ನ ಹಾಗೇ ಆಗುತ್ತಿದ್ದೇನೆ . 
ಸುತ್ತ ಮುತ್ತ ಇರುವ ನೆಂಟರಿಷ್ಟರು ಸ್ನೇಹಿತರು ಎಲ್ಲರಿಗೂ ನಿನ್ನ ಹಾಗೆ ಕೈಮುಗಿಯುವ ಪ್ರವೃತ್ತಿ ಬಂದುಬಿಟ್ಟಿದೆ . ಚಿಕ್ಕವನಿದ್ದಾಗ ನಾನೇ ನಿನಗೆ ಹೇಳುತ್ತಿದ್ದೆ ಎಲ್ಲರಿಗೆ ಕೈ ಯಾಕೆ ಮುಗಿತೀಯ ದೇವರಿಗೆ ಮುಗಿ ಸಾಕು ಎಂದು . ಅದಕ್ಕೆ ನೀನು ದೇವರು ಎಲ್ಲರಲ್ಲೂ ಇದ್ದಾನೆ ಎಂಬ ತಿಳುವಳಿಕೆ ಬಂದರೆ ನೀನು ಹಾಗೆ ಮಾಡುತ್ತೀಯಾ ಸ್ವಲ್ಪ ಹೆಚ್ಚಿನ ಸಂಸಾರದ ಅನುಭವವಾಗಲಿ ತಡಿ ಎಂದು ನೀ ಹೇಳುತ್ತಿದ್ದೆ . ಅದು ನೂರಕ್ಕೆ ನೂರು ನನ್ನ ಅನುಭವಕ್ಕೆ ಈಗಾಗಲೇ ಬಂದು ಬಿಟ್ಟಿದೆ. 
ನಿನ್ನನ್ನು ನೆನೆಯದ ದಿವಸವೇ ಇಲ್ಲವಲ್ಲ ಅಷ್ಟು ನನ್ನ ಮನದಾಳದಲ್ಲಿ ಬೇರು ಬಿಟ್ಟಿದೀಯಪ್ಪ . 
ಇಂದು ಮೂರನೇ ವರ್ಷದ ಶ್ರಾದ್ಧ ಮಾಡಿ ನಿನ್ನನ್ನು ಸೇರಿ ಮೂರು ತಲೆ ಮಾರಿನವರೆಲ್ಲರೂ ಚೆನ್ನಾಗಿರಿ ಎಂದು, ಎರಡು ಹೊತ್ತು ಊಟ ಖಂಡಿತ ಸಿಗಲಿ , ಎಲ್ಲೇ ಇದ್ದರು ಸ್ನೇಹ ಪ್ರೀತಿ ಸಿಗಲಿ ಅಂತ ಅಷ್ಟೇ ಕೇಳುವುದು ನನಗೆ ಗೊತ್ತಿರೋದು . 
ಆ ದೇವರಿಗೆ ದಿನನಿತ್ಯ ಇನ್ನೂ ಕೇಳ್ತಾನೆ ಇರ್ತೀನಿ ನನ್ನ ಅಪ್ಪನನ್ನು ಚೆನ್ನಾಗಿಟ್ಟಿರು ತಂದೆ ಅಂತ ... ಭಗವಂತ ಖಂಡಿತ ನಿನ್ನನ್ನು ಚೆನ್ನಾಗಿಟ್ಟಿರ್ತಾನೆ ಅಣ್ಣ. ಪುನರಪಿ ಜನನಂ ಪುನರಪಿ ಮರಣಂ ಅಂತ ಜಗದ್ಗುರುಗಳೇ ಹೇಳಿದ್ದಾರಲ್ಲ ... ಇಂದು ಶ್ರಾದ್ದ ಮಾಡಿ ಪಿಂಡ ಇಡುವಾಗ ಬಹಳ ಭಕ್ತಿ ಭಾವದಿಂದ ನಿನ್ನ ಮುಖವನ್ನೇ ಅಂತರಂಗದಲ್ಲಿ ಕಂಡು ಪ್ರಾರ್ಥಿಸಿದ್ದೇನೆ ಅಪ್ಪ. 
ಮುಂದೆ ಜನ್ಮ ನನಗಿದ್ದರೆ ನನ್ನ ತಂದೆಯಾಗಿ ನೀನೆ ಬೇಕು🙏
-ನೀನು ಮತ್ತೆ ನನ್ನಮ್ಮ ಕುಕ್ಕೆ ಸುಬ್ರಹ್ಮಣ್ಯನಲ್ಲಿ ಹರಸಿಕೊಂಡು ಹುಟ್ಟಿದ ಸುಪುತ್ರ : ಸುಬ್ರಮಣ್ಯ ಪದ್ಮನಾಭ ( Picture taken 8 days before my father left his mortal body behind )

ಹೇಗೆಲ್ಲಾ ಮಡಿ ಮಾಡಬಹುದು - ದಶವಿಧ ಭಗವತ್ಕೃಪೆಗೆ ಪಾತ್ರರಾಗಲು


೧. ಶರೀರವನ್ನು ನೀರು ಮತ್ತು ಯೋಗದಿಂದ ಮಡಿ ಮಾಡಬಹುದು
೨. ಉಸಿರನ್ನು ಪ್ರಾಣಾಯಾಮದಿಂದ ಮಡಿ ಮಾಡಬಹುದು
೩. ಮನಸ್ಸನ್ನು ಧ್ಯಾನದಿಂದ ಮಡಿ ಮಾಡಬಹುದು
೪. ಬುದ್ಧಿಯನ್ನು ಆಧ್ಯಾತ್ಮಿಕ ಚಿಂತನೆಗಳಿಂದ ಮಡಿ ಮಾಡಬಹುದು
೫. ನೆನಪುಗಳನ್ನು ಮನನ, ಸಚ್ಚಿಂತನೆಗಳಿಂದ ಮಡಿ ಮಾಡಬಹುದು
೬. ಅಹಂಕಾರವನ್ನು ಸೇವೆಯಿಂದ ಮಡಿ ಮಾಡಬಹುದು
೭. ಆತ್ಮವನ್ನು ಮೌನದಿಂದ ಮಡಿ ಮಾಡಬಹುದು
೮. ಆಹಾರವನ್ನು ತಯಾರಿಸುವಾಗ, ಬಡಿಸುವಾಗ ಮತ್ತು ಭುಂಜಿಸುವಾಗ ಸಕಾರಾತ್ಮಕ ಚಿಂತನೆಗಳಿಂದ ಮಡಿ ಮಾಡಬಹುದು
೯. ಸಂಪತ್ತನ್ನು ದಾನದಿಂದ ಮಡಿ ಮಾಡಬಹುದು
೧೦. ಭಾವನೆಗಳನ್ನು ಭಗವಂತನಲ್ಲಿ ನಿಷ್ಕಾಮ ಪ್ರೇಮ ಹಾಗು ಶರಣಾಗತಿ ಮೂಲಕ ಮಡಿ ಮಾಡಬಹುದು 🙏

ಆತ್ಮೋದ್ದಾರಿ... ದಾರಿ ಯಾವುದಯ್ಯ ಆತ್ಮೋದ್ಧಾರಕ್ಕೆ


ಸೇವೆಯ ಮೂಲಕ ಅನುಭವ ಪಡೆಯುವವನು
ತನ್ನ ದೇಹ ಪರೋಪಕಾರಕ್ಕೆಂದು ಅರಿತವನು
ತಿಳಿಯದಿರುವುದನ್ನು ತಿಳಿದಿಲ್ಲವೆಂದು ಹೇಳುವವನು
ತನ್ನ ಮಂಕು ಬುದ್ದಿಗೆ ನಿತ್ಯವೂ ಪಾಠ ಕಲಿಸುವವನು
ತನ್ನ ಚಿತ್ತ ಶುದ್ದಿಗೆ ನಿತ್ಯವೂ ಹಾತೊರೆಯುವವನು
ತನ್ನ ಅಹಂಕಾರವನ್ನೇ ಮೆಟ್ಟಿ ನಿಂತು ಕರಗಿಸುವವನು
ಎಲ್ಲರಲ್ಲೂ ದೇವನಿದ್ದಾನೆಂದು ಕೈ ಮುಗಿಯುವವನು
-ಸುಬ್ಬು ಪದ್ಮನಾಭ
Oct 24, 2019


ಕರುಣೆ

ಬೇಡು ಬೇಡೆನ್ನಾತ್ಮ 
ನಿತ್ಯ ಹರಸುವ ಬೊಗಸೆ ಕೈಗಳನ್ನು 
ತೋರು ತೊರೆನ್ನಾತ್ಮ 
ಪ್ರತಿಫಲ ಬಯಸದೆ ಕಾಯುವ ಕರುಣೆಯನು 
-ಸುಬ್ಬು ಪದ್ಮನಾಭ್

Wednesday, October 23, 2019

ಓ ಮನವೇ


ಮನೆಯೊಳಗಿಹೆ ಮರೆಯದೆ ಮಾಧವನ
ನೆನೆ ನೆನೆದು ಅಂತರ್ಮುಖಿಯಾಗು
   
ಸಂಸಾರದಲ್ಲಿಹೆ ಅರಿವಿನ ಸಂಸ್ಕಾರವ
ಹರಿಬಿಡು ಬಹಿರ್ಮುಖಿಯಾಗು

ನನ್ನೊಳಗೂ ಹೊರಗೂ ಕೇಶವನ    
ದರ್ಶನ ವರಯೋಗವಲ್ಲದಿನ್ನೇನೋ
-ಸುಬ್ಬು ಪದ್ಮನಾಭ    
Oct 18, 2019

Sunday, October 13, 2019

ಶುದ್ಧ ಜ್ಞಾನ

ಶುದ್ಧ ಜ್ಞಾನ- 
-----------
ನಿತ್ಯವೂ ಅಕ್ಷರ ಅಭ್ಯಾಸವಿರಲು 
ವೃದ್ಧಿಸುವುದೆನ್ನ ಆತ್ಮಾವಲೋಕನ 


ಶುದ್ಧ ಜ್ಞಾನ ಮೇಲೇರುತಿರಲು 
ನಿತ್ಯವೂ ಅಹಂಕಾರದ ಅಧ:ಪತನ 

-ಸುಬ್ಬು ಪದ್ಮನಾಭ
Oct 12, 2019


ಯಾವುದು ಶಿಕ್ಷಣ ?


ಜೀವನದ ಕಷ್ಟ ನಷ್ಟ ನೋವು ಬೇನೆ ಶಿಕ್ಷೆಯಾಗದೆ
ಶುದ್ಧ ಜ್ಞಾನದ ಶಿಕ್ಷಣ ನನಗಾಗುವುದೇ ?

ಹೊರಗಿನ ವಸ್ತುಗಳಲ್ಲಿ ಶಾಂತಿಯಿದೆ ಎಂದು ತಿಳಿದಿದೆ
ಅವನಿಗೆ ಶರಣಾಗದೆ ಬುದ್ದಿಯ ಭ್ರಾಂತಿ ಹೋಗುವುದೇ ?

ನೊಂದು ಬೆಂದು ಕೆಸರಿನ ಕಮಲದ ಹಾಗೆ ಮೀಯದೆ
ನನ್ನೊಳಗೆ ಅವನಿರುವಿಕೆಯ ಅರಿವಾಗುವುದೇ ?  
-ಸುಬ್ಬು ಪದ್ಮನಾಭ    

The consciousness 🙏


Consciousness alone exists
Hence the shine within me exists.

In deep sleep, you surely exist
There is no clue of my body
There is no clue of my mind

If I don't realize you within
No way can I find you outside

Consciousness alone exists
Hence the shine within me exists.

Everything lights up in its presence
Realized that alone exists here and there

Consciousness alone exists
Hence the shine within me exists.
As an experiencer of the world !!

-Subbu Padmanabh
Oct 10, 2019

ಏನಿದು ಹುಟ್ಟು ಸಾವು ?


ಕಾಲ ದೇಶ ನಿಜವಾಗಿ ಎಲ್ಲಿಹುದೋ?
ಪ್ರೀತಿ ವಾತ್ಸಲ್ಯ ಕಣ್ಮುಂದಿಹುದೋ

ಮದುವೆಗೋ ಮಸಣಕೋ
ಪಯಣ ಸಾಗುತಿರಬೇಕೋ

ಧನ್ಯತೆಯು ನಿತ್ಯ ಬದುಕಿನಲ್ಲಿದ್ದರೆ ಸಾಕೋ
ಹುಟ್ಟು ಸಾವುಗಳು ವಿರಮಿಸುವುದ್ಯಾಕೋ ?
-ಸುಬ್ಬು ಪದ್ಮನಾಭ
3rd Oct 2019 ( when my Sodaramaava left us )