ನಮ್ಮ ಮನೆಯಲ್ಲಿ ನನ್ನ ತಂದೆಯವರ ಒಂದು ಹೆರ್ಕ್ಯುಲಸ್ ಸೈಕಲ್ಲು. ನಾನು ಹುಟ್ಟುವ ವೇಳೆಗೆ ಅದಕ್ಕೆ ೨೦ ವರ್ಷ ಆಗಿತ್ತು. ಅದರಲ್ಲೇ ಅವರು ಪೂರ್ತಿ ಜೀವನ ಕಳೆದರು. ನನಗೆ ನಮ್ಮ ಚಿಕ್ಕಪ್ಪ ಹೈ ಸ್ಕೂಲ್ ಗೆ ಬಂದಾಗ ಅಟ್ಲಾಸ್ ಸೈಕಲ್ ಕೊಟ್ಟರು. ಒಟ್ಟು ಮನೆಯಲ್ಲಿ ಎರಡು ಸೈಕಲ್ಲುಗಳೇ ಕಲಿಸಿಕೊಟ್ಟಂತ ಪಾಠ , ಅದರಿಂದ ಸಿಕ್ಕಂತಾ ಸಂತೋಷ ಇವತ್ತು ಬಂಗಲೆಯಂತ ಮನೆಯಲ್ಲಿ ವಾಸವಾಗಿದ್ದು ಕಣ್ಣಿಗೆ ಕಾಣುವುದೆಲ್ಲವನ್ನೂ ಅನುಭವಿಸಿ ಏ ಸಿ ಕಾರಿನಲ್ಲೇ ಓಡಾಡಿದರು ಸಿಗದಿರುವುದು ನನ್ನ ಸ್ವಂತ ಅನುಭವ.
ಆ ಸೈಕಲ್ಲುಗಳನ್ನು ದಿನಾ ಒರೆಸಿಕೊಂಡು ಆಗಾಗ ಸ್ನಾನ ಮಾಡ್ಸಿ , ಆಯುಧ ಪೂಜೆಯ ದಿನ ಪೂಜೆ ಮಾಡಿ ಬಲೂನ್ ಸಿಕ್ಸಿ , ಗಂಧದ ಕಡ್ಡಿ ಸಿಕ್ಸಿ ಒಂದು ದೊಡ್ಡ ರೌಂಡ್ ಹೋಗಿ ಬರುತ್ತಿದ್ದೆ . ಎಂಟನೇ ತರಗತಿಯಿಂದ ಇಂಜಿನಿಯರಿಂಗ್ ೫ ನೇ ಸೆಮಿಸ್ಟರ್ ತನಕ ನನ್ನ ಅಚ್ಚುಮೆಚ್ಚಿನ ಸ್ನೇಹಿತನಾಗಿ ನನ್ನ ಜೊತೆಯೇ ಇತ್ತು . ಪ್ರತಿನಿತ್ಯ ಶಾರದಾ ವಿಲಾಸ್ ಶಾಲೆ ಮತ್ತು ಕಾಲೇಜಿಗೆ ಹೋಗಿ ಬರುತ್ತಿದ್ದೆ . ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ಮೈಸೂರು ಬಸ್ ಸ್ಟಾಂಡ್ ಎದುರು ಇದ್ದ ವೆಲ್ಲಿಂಗ್ಟನ್ ಸೈಕಲ್ ಸ್ಟ್ಯಾಂಡ್ನಲ್ಲಿ ಸೈಕಲ್ಲನ್ನು ಇಟ್ಟು ಬಸ್ ಹಿಡಿದು ಮಂಡ್ಯಕ್ಕೆ ಇಂಜಿನಿಯರಿಂಗ್ ಕಲಿಯಲು ಹೋಗುತ್ತಿದ್ದೆ. ಇಂಜಿನಿಯರಿಂಗ್ ಕಲಿಯುವ ದಿನಗಳಲ್ಲಿ ೨:೨೦ ಕ್ಕೆ ವಾಪಸ್ ಬಂದು ಮಂದಿರಾ ಬೇಡಿ ನಟಿಸಿದ್ದ 'ಶಾಂತಿ' ಧಾರಾವಾಹಿ ನೋಡುವ ಹಂಬಲ, ಅದಕ್ಕೆಂದೇ ಸೀದಾ ಮನೆಗೆ ಬಂದು ನಮ್ಮ ಕೇಶುಭಾವನ ಮನೆಯಲ್ಲಿ ಟೀವಿ ಮುಂದೆ ಹಾಜರು .
ಮೈಸೂರಿನ ಹಲವಾರು ಚಿತ್ರಮಂದಿರಕ್ಕೆ ( ಗಣೇಶ , ವಿದ್ಯಾರಣ್ಯ , ಸರಸ್ವತಿ , ಪದ್ಮ , ಶಾಂತಲಾ , ವುಡ್ಲ್ಯಾಂಡ್ಸ್ , ಸಂಗಮ್ , ರಣಜಿತ್ , ರತ್ನ, ಸ್ಟರ್ಲಿಂಗ್ , ಸ್ಕೈಲೈನ್, ಲಿಡೋ ) ನಾನು ಮತ್ತು ನನ್ನ ಸ್ನೇಹಿತರು ನನ್ನ ಸೈಕಲ್ ಹತ್ತಿ ಡಬಲ್ಸ್ ಕೆಲವು ಸರಿ ಟ್ರಿಪ್ಪಲ್ ರೈಡ್ ಮಾಡಿಕೊಂಡು ಸಿನೆಮಾ ನೋಡಲು ಹೋಗುತ್ತಿದ್ದೆವು.
ನಾನು ಮತ್ತು ನನ್ನ ಪೂಜ್ಯ ತಂದೆಯವರು ಪ್ರತಿ ಗುರುವಾರ ನಮ್ಮ ತಂದೆಯ ಸೈಕಲ್ಲಲ್ಲೇ ಕೃಷ್ಣಮೂರ್ತಿಪುರಂ ರಾಯರ ಮಠಕ್ಕೆ ಡಬಲ್ಸ್ ಹೋಗುತ್ತಿದ್ದವು ರಾಯರ ದರ್ಶನ ಮಾಡುತ್ತಿದ್ದೆವು.
ಚಾಮುಂಡಿಪುರಂ ತುಂಬಾ ಅಪ್ ಇದೆ ಮತ್ತು ಶಾರದಾ ವಿಲಾಸ್ ಕಾಲೇಜು ಹತ್ರ ಅಪ್ ಇದೆ ನನ್ನ ತಂದೆ ಪೆಡಲ್ ಹೊಡೆಯುವಾಗ ಅವರು ಕಷ್ಟ ಪಡುತ್ತಾ ಇದ್ದಿದ್ದು ನೋಡಿ ಅದೇ ಪೆಡಲ್ ಮೇಲೆ ಅರ್ಧ ಕಾಲು ಹಾಕಿ ಪೆಡಲ್ ಮಾಡ್ತಿದ್ದೆ. ರಾಯರ ಪಂಚಾಮೃತ ಅಭಿಷೇಕ ಸೇವಿಸಲು ಮಹಾ ಇಷ್ಟ , ಕಾತುರತೆ. ವಠಾರದಲ್ಲಿ ಎಲ್ಲರ ಮನೆಗೆ ಕೊಟ್ಟು ಬಾ ಅಂತ ಅಜ್ಜಿ ಕಳುಹಿಸುತ್ತಿದ್ದರು. ವಾಪಸ್ ಬಂದ ಮೇಲೆ ಶಾಲೆಗೆ ಹೋಗುವುದು. ಅವರು ಕೆಲ್ಸಕ್ಕೆ ಹೋಗುವುದು.ಇವೆಲ್ಲವೂ ಚಿಕ್ಕಂದಿನಿಂದ ರೂಡಿ.
ಇಬ್ಬರಿಗೂ ಎರಡು ಸೈಕಲ್ ಅಷ್ಟೇ , ತಂದೆಯ ರೈಲ್ವೆ ಕೆಲ್ಸದಿಂದ ವಸ್ತು ವಾಹನ ಮನೆ ಕಟ್ಟಿಕೊಳ್ಳುವಷ್ಟು ದುಡ್ಡು ನಮ್ಮ ತಂದೆಗೆ ಇರಲಿಲ್ಲ . ಸಂಸಾರ ದೊಡ್ಡದು ..೫ ಜನರಿಗೆ ವಿದ್ಯೆ ಕೊಡಿಸಿ ಹೆಣ್ಣುಮಕ್ಕಳಿಗೆ ಮದುವೆ ಮಾಡುವುದೇ ಆಗಿನ ಕಾಲಕ್ಕೆ ದೊಡ್ಡ ವಿಷಯ , ಸಾಲ ಸೌಲ ಮಾಡಿ ಮನೆ ಕಟ್ಕೋಬೇಕು ಅನ್ನೋದು ಅವರಿಗೆ ಬೇಕಿರಲಿಲ್ಲ. ಸಾಲ ಮಾತ್ರ ಯಾವತ್ತೂ ಮಾಡಬಾರದು ಅನ್ನೋ ಮನೋಭಾವ . ವಸ್ತು ವಾಹನಗಳು ಬೇಕು ಬೇಕು ಅನ್ನುವ ಆಸೆ ಆಗ ನನ್ನಲ್ಲಿ ಇರಲಿಲ್ಲ, ನನ್ನ ತಂದೆ ಒಂದೇ ಮಾತು ಹೇಳುತ್ತಿದ್ದರು ಚೆನ್ನಾಗಿ ಓದು ಬರಿ. ಎರಡನೇ ಪೀ ಯು ಇಂದ ಇಂಜಿನಿಯರಿಂಗ್ ಮುಗಿಯುವ ತನಕ ಬರೀ ಟೀವಿ , ಸ್ನೇಹಿತರು ಅಂತ ಕಾಲ ಹರಣ ಮಾಡುತ್ತಿದ್ದೆ . ಕಾಲೇಜು ಪುಸ್ತಕಗಳನ್ನು ತುಂಬಾ ಏನೂ ಓದಿ ಓದಿ ದಬ್ಬಾಕಿಲ್ಲ , ಎಷ್ಟು ಬೇಕೋ ಅಷ್ಟು . ಜೀವನ ಪುಸ್ತಕಗಳನ್ನು ಚೆನ್ನಾಗಿ ಓದಿಕೊಂಡೆ ಅನ್ನಬಹುದು. ಅವರ ಮಾತುಗಳನ್ನು ಚಾಚೂತಪ್ಪದೆ ಅಕ್ಷರಸಹ ಇವತ್ತಿಗೂ ನೆನಪಿಟ್ಟುಕೊಂಡು ಪರಿಪಾಲಿಸಕೊಂಡು ಬರ್ತಾ ಇದ್ದೀನಿ. ನನ್ನ ಕೈಲಿ ಆಗುವುದು ನಾನು ಮಾಡ್ತೀನಿ ಅನ್ನುತ್ತಿದ್ದರು. ಅವರು ತುಂಬಾ ಕಷ್ಟ ಜೀವಿ ಅದಕ್ಕೆ ನನಗೆ ಏನೂ ಕೇಳಬಾರದು ದುಡ್ಡು ಕೇಳಬಾರದು ಶೋಕಿ ಮಾಡುವುದಕ್ಕೆ ದುಡ್ಡು ಸುರಿಯಬಾರದು ಅನ್ನುವುದು ಆಗಲೇ ಮನದಟ್ಟಾಗಿತ್ತು . ಯಾರಾದ್ರೂ ತುಂಬಾ ಕಷ್ಟ ಇವರಿಗೆ ಅಂತ ಅಂದ್ರೆ ನನಗೆ ಮಲ್ಕೋಳೊ ಸಮಯದಲ್ಲಿ ಹೇಳ್ತಾ ಇದ್ದ ಮಾತುಗಳು "ಕಷ್ಟ ಕಾರ್ಪಣ್ಯದಿಂದ ಮಾತ್ರ ಮನುಷ್ಯ ಕಲಿಯೋಕ್ಕೆ ಸಾಧ್ಯ ರಾಜ . ಸುಖದ ಸುಪ್ಪತಿಗೆ ಇದ್ರೆ ಏನೂ ಕಲ್ಯಲ್ಲ "-- ಎಷ್ಟು ಸತ್ಯ ಅಲ್ವಾ ? ತಮ್ಮ ನಲವತ್ತೆರಡನೆ ವಯಸ್ಸಿನಲ್ಲಿ ನನ್ನ ಅಮ್ಮನನ್ನು ಕಳೆದುಕೊಂಡು ಬಹಳ ದುಃಖದಲ್ಲಿ ಮುಳುಗಿಹೋಗಿದ್ದರು. ನನಗೆ ಆಗ ಎರಡುವರೆ ವರ್ಷ. ಅವರಿಗೆ ಒಂದಿಬ್ಬರು ಪುನಃ ಮದುವೆ ಮಾಡಿಕೊಳ್ಳಲು ಒತ್ತಾಯಿಸಿದ್ದರಂತೆ , ಅವರ ಮಾತನ್ನು ನಿರಾಕರಿಸಿದ್ದರು. ನನ್ನ ತಾಯಿಯ ಸಾವಿನ ದುಃಖದಿಂದ ಬಹಳ ಬೇಗ ಹೊರಬಂದು ಮಕ್ಕಳ ಸಲುವಾಗಿ ಎರಡೆರಡು ಶಿಫ್ಟ್ ಕೆಲಸ ಮಾಡಿ ನನ್ನ ೪ ಜನ ಅಕ್ಕಂದಿರ ಮದುವೆ ಮಾಡಿಸಿ, ನನಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಿದರು.
ತನ್ನ ಕೊನೆಯ ಉಸಿರಿರುವವರೆಗೂ ಸ್ವಂತ ಮಗನಾದ ನನ್ನನ್ನೂ ಸೇರಿಸಿ ಒಬ್ಬರನ್ನೂ ಒಂದು ರೂಪಾಯಿ ಸಹ ಕೇಳದೆ ಆದರ್ಶ ಬದುಕು ಬದುಕಿದವರು. ಆದಷ್ಟು ದೇವರ ಪೂಜೆ ಪುನಸ್ಕಾರ ಅವನ ನಾಮಸ್ಮರಣೆಯಲ್ಲೇ ತಮ್ಮ ಜೀವನ ನಡೆಸಿದವರು. ನೆಂಟರಿಷ್ಠರ ಮದುವೆ ಸಮಾರಂಭಗಳಲ್ಲಿ ಹೋಗಿ ತಮಗೆ ಯಾರು ಹೇಳದಿದ್ದರೂ ಮುನ್ನುಗ್ಗಿ ತಾವೇ ಕೆಲಸ ಮಾಡಿಕೊಡುತ್ತಿದ್ದರು. ಅವರ ಓದಾರ್ಯವನ್ನು ದುರುಪಯೋಗ ಪಡೆಸಿಕೊಂಡವರ ನೆಂಟರನ್ನೂ ನಾನು ಹಲವು ಬಾರಿ ನೋಡಿದ್ದೇನೆ. ಕೆಲವು ಬಾರಿ ಈ ಕುರಿತು ಪ್ರಶ್ನಿಸಿದಾಗ ಅವರು ಹೇಳುತ್ತಿದ್ದ್ದ ಮಾತು - " ರಾಜ , ನಾವು ಮಾಡಿದ್ದು ನಮಗೆ ಅವರು ಮಾಡೋದು ಅವರಿಗೆ " .
ಆ ಮಾತಿನ ಅರ್ಥ ಮಾತಿನ ಸಿದ್ದಾಂತ ಮತ್ತವರ ಆಂತರ್ಯ ಎಲ್ಲವೂ ನನಗೆ ಇವತ್ತಿಗೆ ತಿಳಿಯುತ್ತದೆ .
ಸ್ವಂತ ಮಕ್ಕಳಾದ ನಾವೇ ಎಷ್ಟೊಂದು ಸಾರಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದೆವು , ಹಾಗೆ ಮಾತನಾಡಬಾರದು ಅನ್ನುವ ತಿಳುವಳಿಕೆ ನಮಗೆ ಇರಲಿಲ್ಲ. ಈಗಲೂ ಇಲ್ಲ ಬಿಡಿ. ನನ್ನ ತಂದೆ ನಿಜವಾಗಿ ಸಿಟ್ಟು ಮಾಡಿಕೊಂಡು ಒಂದಕ್ಕೂ ಪ್ರತಿಕ್ರಿಯಿಸಿದ್ದು ನನ್ನ ಜನ್ಮದಲ್ಲಿ ನಾನು ನೋಡೇ ಇಲ್ಲ. ಬಹಳ ಮೃದು ಸ್ವಭಾವದ ಏಕಾಂಗಿ ವ್ಯಕ್ತಿತ್ವ ಮತ್ತು ಸರ್ವಶಕ್ತ ಆಧ್ಯಾತ್ಮ ಚಿಂತಕರು. ಉತ್ತುಂಗತ ಮಟ್ಟದಲ್ಲಿ ಬದುಕನ್ನು ಅರ್ಥ ಮಾಡಿಕೊಂಡು ಅವರ ಅತ್ಯುತ್ತಮ ಚಿಂತನೆಗಳೊಂದಿಗೆ ನಡೆದುಕೊಂಡವರು. ತುಂಬಾ ಸರಳವಾದ ಜೀವನ ಶೈಲಿ ನಡೆಸಿದವರು. ಈ ಮಾತುಗಳನ್ನು ಒಪ್ಪುವುದಕ್ಕೆ ಇವತ್ತಿಗೆ ಕನಿಷ್ಠ ಅಂದ್ರು ೫೦೦ ಜನರಾದ್ರು ಸಿಗುತ್ತಾರೆ .
ಇನ್ನು ನಮ್ಮ ಮನೆ ಬಗ್ಗೆ ಏನು ಹೇಳಲಿ ...ಅವರ ಪಾಲಿಗೆ ಬಂದಿದ್ದು ಒಂದು ಚಿಕ್ಕ ಹಂಚಿನ ಮನೆ(300 sq feet) ,ಅದರ ಪಕ್ಕದಲ್ಲಿ ಇನ್ನೊಂದು ಚಿಕ್ಕ ಮನೆ (300 Sq feet ,ತಿಂಗಳಿಗೆ ೨೦೦ ರೂಪಾಯಿ ಬಾಡಿಗೆ ಅದು ನನ್ನ ವಿದ್ಯಾಭ್ಯಾಸಕ್ಕೆ ಅಪ್ಪ ಕೊಡುತ್ತಿದ್ದರು , ಅದರಲ್ಲಿ ನನ್ನ ಓದು ಬರಹ, ಪುಸ್ತಕ ,ಪೆನ್ನು, ಪೆನ್ಸಿಲ್ಲು ಬಟ್ಟೆ ,ಶಾಲೆ ಬ್ಯಾಗು ಮತ್ತು ಸಿನಿಮಾ ಶೋಕಿ ಇಷ್ಟು ನಡೆಯುತ್ತಿತ್ತು ) ನಮ್ಮ ಮನೆಯ ಹಂಚು ೩-೪ ಜಾಗದಲ್ಲಿ ಮುರಿದ ಕಾರಣ ಮಳೆಗಾಲದಲ್ಲಿ ತುಂಬಾ ದಿನಗಳು ಪೂರ್ತಿಯಾಗಿ ನಿದ್ದೆ ಮಾಡಿದ್ದೇ ಇಲ್ಲ. ಅಲ್ಲಲ್ಲಿ ಬಕೀಟು ಇಟ್ಟು ನೀರು ಬೀಳದೆ ಇರುವ ಜಾಗದಲ್ಲಿ ಕೂತು ಕಳೆದ ಹಲಾವಾರು ರಾತ್ರಿಗಳು ಲೆಕ್ಕವೇ ಇಲ್ಲ. ಆ ಚಿಕ್ಕ ಚಿಕ್ಕ ಮನೆಯನ್ನು ಜೋಡಿಸಿ ಈಗ ಶೀಟ್ ಮನೆ ಅಂತ ಇದೆ , ಅಲ್ಲಿ ನನ್ನ ಅಕ್ಕ ತನ್ನ ಮಗನೊಂದಿಗೆ ವಾಸಿಸುತ್ತಿದ್ದಾಳೆ. ನಮ್ಮ ಅಜ್ಜಿ ನಮ್ಮ ಮನೆಯ ಕಷ್ಟ ಕಾರ್ಪಣ್ಯಗಳನ್ನು ನೋಡಿ ನಮ್ಮ ಜೊತೆಯಲ್ಲೇ ಇರುತ್ತಿದ್ದರು. ಮುದ್ದೆ ಸಾರು ತಿಳಿ ಮಜ್ಜಿಗೆ ನಮ್ಮ ಅಪ್ಪನ ಪ್ರೀತಿಯ ಊಟ . ಅದನ್ನೇ ನಮ್ಮ ಅಜ್ಜಿ ಹೆಚ್ಚು ಮಾಡುತ್ತಿದ್ದರು , ಆಗಲೇ ನನಗೆ ಮುದ್ದೆ ತಿನ್ನುವ ಅಭ್ಯಾಸವಾಯಿತು. ನನ್ನ ಹಲಾವಾರು ಪ್ರಶ್ನೆಗಳಿಗೆ ತುಂಬಾ ಆಧ್ಯಾತ್ಮ ವಿಚಾರಗಳು ಅಡಕವಾಗಿರುವ ಉತ್ತರ ಕೊಡುತ್ತಿದ್ದರು , ಇದು ಅವರ ತುಂಬಾ ಸ್ವಂತ ವಿಚಾರ ಆಚೆಯವರಿಗೆ ಒಂದು ತುಣುಕು ಗೊತ್ತಾಗುತ್ತಿರಲಿಲ್ಲ.
ಹೋದ ವರ್ಷ Sep 8, 2016 ಇದೇ ದಿನ ಮೊದಲು ಅವರು ಹೊಟ್ಟೆಯಲ್ಲಿ ನೋವು ತಡೆಯಕ್ಕೆ ಕಷ್ಟ ಆಗ್ತಾ ಇದೆ ಎಂದು ಹೇಳಿಕೊಂಡಿದ್ದು. ವಿಷಯ ಹೀಗೆ ಅಂತ ತಿಳಿದ ಮೇಲೆ ಒಂದು ಕ್ಷಣವೂ ಅಮೇರಿಕಾದಲ್ಲಿ ಉಳಿಯುದಕ್ಕೆ ಮನಸ್ಸಿರಲಿಲ್ಲ . ಮ್ಯಾನೇಜರ್ ಹತ್ರ ಹೋದೆ , ಎಷ್ಟು ಕಾಲ ಆಗುತ್ತೋ ಗೊತ್ತಿಲ್ಲ ನನ್ನ ಕೆಲ್ಸಕ್ಕೆ ರಾಜೀನಾಮೆ ಅಂತ ಲೆಕ್ಕ ಅಂದೆ... ಸೀದಾ ಭಾರತಕ್ಕೆ ಮರಳಿದೆ . ೧೦ ವರ್ಷಗಳಿಂದ ಅಮೇರಿಕಾದಲ್ಲಿ ವಾಸವಾಗಿದ್ದ ನನಗೆ ನನ್ನನ್ನು ತುಂಬಾ ಕಾಡುವ ವಿಷಯ ಅಂತ ಇದ್ದಿದ್ದು ನನ್ನ ತಂದೆಯ ಕಡೆಯ ದಿನಗಳ ಬಗ್ಗೆ ಮಾತ್ರ . ನಾನು ಅವರ ಕಡೆಯ ದಿನಗಳಲ್ಲಿ ಹೇಗಾದರೂ ಉಪಯೋಗವಾಗಬೇಕು ಅನ್ನುವುದೊಂದೇ , ಮತ್ತೇನೂ ಇಲ್ಲ . ಸ್ಕ್ಯಾನ್ ಮಾಡಿಸಿಕೊಂಡು ಮೈಸೂರಿನಲ್ಲಿ ಆಸ್ಪತ್ರೆ ಸೇರಿಕೊಂಡವರು (ಅಲ್ಲಿಂದ ಬೆಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು ).ಇನ್ನು ನಾನು ಅಮೇರಿಕಾದಿಂದ ಹೋಗಿ ಬೆಂಗಳೂರಿನ ಆಸ್ಪತ್ರೆಯಿಂದ ನಮ್ಮ ಬೆಂಗಳೂರಿನ ಮನೆಗೆ ಕರೆದುಕೊಂಡು ಬರುವವರೆಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ತೆಗೆದುಕೊಳ್ಳುತ್ತಾ ಇದ್ದರು. ೮೪ ವರ್ಷ ಮತ್ತು ನಾಲ್ಕನೇ ಹಂತದ Esophageal cancer. ಏನು ನಿರೀಕ್ಷಿಸಬಹುದು ಎಂಬುದು ನಮಗೆ ತಿಳಿದರೆ ಸಾಕು.
ಬೆಂಗಳೂರಿನ ಆಸ್ಪತ್ರೆಗೆ ಹೋಗಿ ನಮ್ಮಪ್ಪನನ್ನು ತಬ್ಬಿಕೊಂಡು ಗಳ ಗಳ ಅತ್ತುಬಿಟ್ಟೆ . ನನ್ನಪ್ಪ ನನಗೆ ಕಣ್ಣು ಒರೆಸಿ ಅಳಬೇಡಪ್ಪ ಅಂತ ಸಮಾಧಾನ ಮಾಡಿದ್ದರು . ಎಷ್ಟೇ ಸಮಾಧಾನ ಮಾಡಿದ್ರು ಮನಸ್ಸು ಸುಮ್ನೆ ಇರ್ಬೇಕಲ್ಲ , ದುಃಖ ಆವರಿಸಿಕೊಂಡು ಬಂದೇ ಬರುತ್ತೆ. ದೇವರ ಸತ್ಯ ಅಂತ ಒಂದು ಇರುತ್ತೆ ಅದರ ಪ್ರಕಾರ ಎಲ್ಲವೂ ನಡಿಯುತ್ತೆ ಅಂತ ನನ್ನನ್ನು ಮತ್ತೆ ಮತ್ತೆ ಸಮಾಧಾನ ಮಾಡಿದ್ರು. ಅವರಲ್ಲಿ ಆ ಮಟ್ಟಕ್ಕೆ ಚಿಂತನೆಗಳು ಇದೆ ಎಂದು ಮಗನಾದ ನನ್ನ ಬಿಟ್ಟರೆ ಬೇರೆ ಯಾರಿಗೂ ತಿಳಿದಿರುವುದಕ್ಕೆ ಸಾಧ್ಯವೇ ಇಲ್ಲ. ಅಷ್ಟು ಸ್ವಂತ ವಿಷಯಗಳು ಅವರದಾಗಿತ್ತು . ಅವರ ಕೊನೆಯ ಹತ್ತು ವರ್ಷಗಳಲ್ಲಿ ಅವರು ತುಂಬಾ ಇಷ್ಟ ಪಟ್ಟು ಹೋಗುತ್ತಿದ್ದ ಜಾಗ ಮೈಸೂರಿನ ಮನೆ ಹತ್ತಿರದ ಸಂಗೀತ ಸಭೆ-ನಾದಬ್ರಹ್ಮ ಸಂಗೀತ ಸಭಾ , ಮೈಸೂರು ಅವರ ತುಂಬಾ ಇಷ್ಟವಾದ ಸ್ಥಳ. ದೊಡ್ಡ ದೊಡ್ಡ ವಿದ್ವಾಂಸರು ಬಂದು ಗೀತಾಜ್ಞಾನ ಯಜ್ಞ , ಮಂಕುತಿಮ್ಮನ ಕಗ್ಗ ಎಲ್ಲದರ ಬಗ್ಗೆ ಮಾತನಾಡುವುದನ್ನು ತಿಳಿದುಕೊಂಡು ಬರುತ್ತಿದ್ದರು. ನಾವಿಬ್ಬರು ಸ್ನೇಹಿತರ ಹಾಗೆ ಗಂಟೆ ಗಟ್ಟಲೆ ಅದರ ಬಗ್ಗೆ ಅಕ್ಟೋಬರ್ ೨೦೧೬ ರ ತನಕವೂ ಮಾತನಾಡುತ್ತಿದ್ದೆವು.
ಸೆಪ್ಟೆಂಬರ್ ತಿಂಗಳ ಕೊನೆಯ ೨೮ ನೇ ತಾರೀಕು ಆಸ್ಪತ್ರೆಯಲ್ಲಿ ಅವರಿದ್ದಾಗ ನಾನು ಕ್ಯಾಂಟೀನ್ ಇಂದ ಸ್ವಲ್ಪ ತಿಂಡಿ ಕಾಫಿ ತಂದು ಒಳಗೆ ಬರುವಾಗ ಅವರ ಕ್ಯಾನ್ಸರ್ ರಿಪೋರ್ಟ್ ಓದುತ್ತಾ ಇದ್ರು ತಮಗೆ ಕ್ಯಾನ್ಸರ ಆಗಿರುವುದು ತಿಳಿದುಕೊಂಡು ದೇವರ ಫೋಟೋ ನೋಡಿ ದೇವರಿಗೆ ಕೈ ಮುಗಿದರು. ಒಹ್ ನನಗೆ ಕ್ಯಾನ್ಸರ ಆಗಿರೋದು ಅದಕ್ಕೆ ಇಷ್ಟು ಸಂಕಟ ನೋವು ಎಂದು ಬಾಯಿ ಬಿಟ್ಟು ಹೇಳುದ್ರು . ಅದೆಲ್ಲ ಅಷ್ಟು ಯೋಚ್ನೆ ಮಾಡ್ಬೇಡಪ್ಪಾ , ನಾಳೆ ಡಿಸ್ಚಾರ್ಜ್ ಮಾಡ್ತಾರೆ Morphin ಕೊಟ್ಟಿದಾರೆ ನೋವೆಲ್ಲಾ ಕಡಿಮೆ ಆಗ್ತಾ ಹೋಗುತ್ತೆ ಅಂತ ಸುಳ್ಳು ಹೇಳ್ದೆ , ಆಚೆ ಬಂದು ವಿಪರೀತ ಅತ್ತೆ . ಅವರಿಗೆ ತಿಳಿದಿತ್ತು ಇನ್ನು ಹೆಚ್ಚು ಕಾಲ ಇಲ್ಲ ಅಂತ. ಆದರೂ ದುಃಖ ಪಟ್ಟವರಲ್ಲ. ಸುಮ್ಮನೆ ಕುಳಿತು ಮುಂದೆ ಮಾಡುವ ಕೆಲ್ಸಗಳ ಬಗ್ಗೆ ವಿಚಾರ ಮಾಡುತ್ತಾ ಸ್ವಲ್ಪ ನಮ್ಮೆಲ್ಲರ ಯೋಗಕ್ಷೇಮ ವಿಚಾರಗಳನ್ನು ಮಾತನಾಡಿದರು. ಆ ಮಟ್ಟಕ್ಕೆ ಜೀವನ ತೃಪ್ತಿ ಅನುಭವಿಸಿ ಮುಂದಿನ ಪ್ರಯಾಣಕ್ಕೆ ಒಪ್ಪಿಕೊಂಡು ತಯಾರಿದ್ದರು. ದೇವರ ಧ್ಯಾನವೊಂದೇ ಧ್ಯೇಯ. ನನಗೆ ಯಾಕಪ್ಪ ಹೀಗೆ ಮಾಡಿದೆ ಅಂತ ಒಂದು ದಿನವೂ ಅವರ ಬಾಯಲ್ಲಿ ಬರ್ಲೇ ಇಲ್ಲ. ೫೦-೬೦ ಜನ ನೆಂಟರು ಇಷ್ಟರು ಆಸ್ಪತ್ರೆಗೆ ಮತ್ತು ಮನೆಗೆ ಅವರು ಬದುಕಿದ್ದಾಗ ಬಂದು ನಾನು ಅಮೇರಿಕಾದಿಂದ ಕಡೆಗಾಲದಲ್ಲಿ ಬಂದೆ ಅಂತ ಬೆನ್ನು ತಟ್ಟಿ ಪ್ರೋತ್ಸಾಹ ಕೊಟ್ಟು ಅಪ್ಪನನ್ನು ಚೆನ್ನಾಗಿ ನೋಡಿಕೊಪ್ಪ ಅಂದು ಹೋದರು , ಆದರೆ ಇನ್ನು ಕೆಲವರು ಬೇರೆ ಬೇರೆ ವಿಚಾರಗಳನ್ನೇ ಮನಸ್ಸಿನಲ್ಲಿ ಇಟ್ಟುಕೊಂಡಿರುತ್ತಾರೆ, ಅವರಿಗೆಲ್ಲರಿಗೂ ತಮ್ಮ ತಮ್ಮ ಗೊಂದಲಗಳನ್ನು ಬಿಡಿಸಿಕೊಂಡು ವಿಚಾರಗಳನ್ನು ಮೇಲ್ಮಟ್ಟದಲ್ಲಿ ಚಿಂತಿಸುವಂತಾಗಲಿ ಎಂದು ಪ್ರಾರ್ಥಿಸುವೆ.
ಮನೆಗೆ ಕರೆದುಕೊಂಡು ಬಂದು ನಾವಿಬ್ಬರು ಬೇಕಾದಷ್ಟು ವಿಷಯಗಳನ್ನು ಮಾತನಾಡಿದ್ದೇ ನನ್ನಲ್ಲಿ ಉಳಿದ ಎಂದೂ ಅಳಿಯದ ಅತ್ಯುತ್ತಮವಾದ ಆಸ್ತಿ. ನನಗೆ ಏನೆಲ್ಲಾ ವಿಷಯಗಳನ್ನು ತಿಳಿಸಬೇಕೋ ಎಲ್ಲವನ್ನು ತಿಳಿಸಿದರು, ವೇದ ಮಂತ್ರಗಳನ್ನು ಪಕ್ಕದಲ್ಲೇ ಕೂತು ಓದುತ್ತಿದ್ದೆ , ಕೇಳಿ ಸಂತೋಷ ಪಟ್ಟು ನನ್ನ ಕೈಯನ್ನು ಗಟ್ಟಿಯಾಗಿ ಒತ್ತಿ ತಮ್ಮ ಹಣೆಯ ಮೇಲೆ ಇಟ್ಟಿಕೊಳ್ಳುತ್ತಿದ್ದರು .ನನಗೆ ಅಂತರಾಳದಲ್ಲಿ ತುಂಬಾ ಕಾಡುತ್ತಾ ಇದ್ದಿದ್ದು ಅದೇ , ನನ್ನ ತಂದೆಯವರಿಗೆ ಕಡೆಗಾಲದಲ್ಲಿ ನೆರವಾಗಬೇಕು ಅನ್ನುವುದೊಂದೇ.
ನನ್ನ ಪಾಲಿಗೆ ತುಂಬಾ ಖುಷಿ ತಂದಿದೆ, ಅಷ್ಟೊಂದು ದಿನಗಳು ಅವರೊಂದಿಗೆ ಒಟ್ಟಿಗೆ ಕಾಲ ಕಳೆದಿರುವುದು ಎಂದೆಂದಿಗೂ ಮರೆಯಲಾರೆ. ಅದನ್ನು ದೇವರು ಈ ರೀತಿಯಾಗಿ ನನಗೆ ಕರುಣಿಸಿದ ಎಂದು ಭಾವಿಸಿದೆ . ಇದೆಲ್ಲವೂ ನನ್ನ ತಂದೆಯ ಮೂಲಕ ದೇವರು ತನ್ನ ಇರುವಿಕೆಯನ್ನು ನನ್ನ ಅನುಭವಕ್ಕೆ ತಂದುಕೊಟ್ಟ ರೀತಿ.
ಅವರು ಹೇಳಿಕೊಟ್ಟಿರುವ ಮಾತುಗಳು ನಡೆದುಕೊಂಡು ಬಂದ ಆದರ್ಶಗಳನ್ನೇ ಅನುಸರಿಸಿ ನಾನು ಅವರಂತೆಯೇ ನಡೆದುಕೊಳ್ಳಬೇಕೆಂಬ ಮಹದಾಸೆ ಇಟ್ಟುಕೊಂಡಿದ್ದೇನೆ. - Subbu Padmanabh