Monday, December 3, 2018

ಕನ್ನಡ ಸಿನಿಮಾ - ಪರಿಣಾಮ ಬೀರಿ ನಮ್ಮನ್ನಗಲಿದ ಮೇರು ನಟರು

ಕನ್ನಡ ಸಿನಿಮಾ - ಪರಿಣಾಮ ಬೀರಿ ನಮ್ಮನ್ನಗಲಿದ ಮೇರು ನಟರು 
------------------------------------------
ಆಗೊಂದು ಕಾಲ ಇತ್ತು ಮನೆಯವರೇ ಸಿನಿಮಾಕ್ಕೆ ಕರ್ಕೊಂಡು ಹೋಗುತ್ತಿದ್ರು . ಈಗ ಆ ರೀತಿ ಮಕ್ಕಳಿಗೆ ಕನ್ನಡ ಸಿನಿಮಾ ಅಂತ ಬಂದಿದ್ದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ - ಕಾಸರಗೋಡು. ನಮ್ಮ ತಂದೆ ನಮ್ಮ ಅಜ್ಜಿಯವರನ್ನು ಮತ್ತು ನನ್ನನ್ನು ಭಕ್ತಿ ಪ್ರಧಾನ ಚಿತ್ರಗಳಾದ ಪೂಜಾಫಲ , ಭಕ್ತ ಸಿರಿಯಾಳ ಚಿತ್ರಕ್ಕೆ ಕರೆದುಕೊಂಡು ಹೋಗಿ ತೋರ್ಸಿದ್ದು ಜ್ಞಾಪಕ ಇದೆ . ಆಗ ೪-೫ ವರ್ಷ ಅನ್ಸುತ್ತೆ ,ಸಿನಿಮಾದಲ್ಲಿ ಈಶ್ವರನ ಮೇಲೆ ಹಾಡು ಬಿಟ್ಟರೆ ಬೇರೆ ಜ್ಞಾಪಕ ಇಲ್ಲ . ಇದಾದ ಮೇಲೆ ನಾನು ನೋಡಲು ಶುರು ಮಾಡಿದ್ದೇ ರಾಜಕುಮಾರ್ ಸಿನಿಮಾಗಳು. ನಾನು ದೊಡ್ಡ ಪರದೆ ಮೇಲೆ ನೋಡಿದ ಮೊಟ್ಟ ಮೊದಲ ರಾಜಕುಮಾರ್ ಚಿತ್ರ " ಹೊಸಬೆಳಕು ".

ಚಿಕ್ಕ ಹುಡುಗನಾಗಿದ್ದಾಗ ಭಕ್ತಿ ಪ್ರಧಾನ ಪೌರಾಣಿಕ ಚಿತ್ರಗಳಲ್ಲದೆ ಬೇರೆ ಸಿನಿಮಾ ನೋಡುವುದಕ್ಕೆ ಮನೆಯಲ್ಲಿ ಯಾರಿಗೂ ಅಷ್ಟು ಇಷ್ಟವಾಗುತ್ತಿರಲಿಲ್ಲ ಎಂದು ಗಮನಿಸುತ್ತಿದ್ದೆ . ಇನ್ನೆಲ್ಲಿ ನಾನು ಓದುವುದು ಬರೆಯುವುದನ್ನು ಬದಿಗೊತ್ತಿ ಸಿನಿಮಾ ಕಡೆ ಗಮನ ಹರಿಸ್ಬಿಡ್ತಾನೋ ಎಂದು ನಮ್ಮ ತಂದೆಗೆ ಅನ್ನಿಸ್ತಾ ಇತ್ತು. ಒಂದು ಸಾರಿ ಹೇಳಿದ್ರು ಕೂಡ . ಆದರೆ ನಾನು ಏಳೆಂಟು ವರ್ಷವಿರುವಾಗಲೇ ಭರವಸೆ ಕೊಟ್ಟಿದ್ದೆ ಹಾಗೆಲ್ಲ ಏನೂ ಆಗಲ್ಲ ಓದು ಬರಹ ನನ್ನ ಅಗ್ರ ಆದ್ಯತೆ ಅಣ್ಣ ಅಂದಿದ್ದೆ . ಟೀನ್ ವಯಸ್ಸಲ್ಲಿ ಹೀಗೆ ರಾಜಕುಮಾರ ಸಿನಿಮಾ ಮತ್ತು ವಿಷ್ಣುವರ್ಧನ್ ಚಿತ್ರ ಅಲ್ಲಲ್ಲಿ ಇಲ್ಲಿಲ್ಲಿ ನೋಡಲು ಮೆಲ್ಲ ಶುರುವಾಯ್ತು .

ಆರ್ ಕೆ ನಾರಾಯಣ್ ಆಧರಿತ ಕಥೆಗಳು ಟೀ ವಿ ಯಲ್ಲಿ ಮಾಲ್ಗುಡಿ ಡೇಸ್ ನೋಡುವುದಕ್ಕೆ ತುಂಬಾ ಇಷ್ಟವಾದ ದಿನಗಳವು. ಶಂಕರ್ ನಾಗ್ ಕಂಡರೆ ಬಲು ಇಷ್ಟವಾಗಿ ಹೋಗಿದ್ರು . ಅವರ ಮಾಲ್ಗುಡಿ ಡೇಸ್ ನೋಡಲು ಅದೆಷ್ಟು ಕಾತುರತೆ . ಎಲ್ಲಾ ಹೋಂ ವರ್ಕ್ ಮಾಡಿ ಊಟ ಮಾಡಿ ಪಕ್ಕದ ಮನೆಗೆ ಹೋಗಿ ಟೀ ವಿ ಹಾಕಿಸುತ್ತಿದ್ದೆ .ತಾ ನಾ ನ ನ ನ ನ ನ ನಾ ಎಂದು ಶುರುವಾದರೆ ಸಾಕು ಆ ಹಳ್ಳಿ ಬೀದಿಗಳು ಮಿಠಾಯಿ ಅಂಗಡಿ , ಅನಂತ್ ನಾಗ್ ಮತ್ತು ಮಂಜುನಾಥ್ ರವರ ಶ್ರೇಷ್ಠ ಅಭಿನಯ ಎಲ್ಲಾ ಕಣ್ಣಲ್ಲಿ ಕಟ್ಟಿದೆ . ಮೊನ್ನೆ ಮೊನ್ನೆ ಅನಂತ್ ಸರ್ ಅಮೆರಿಕಕ್ಕೆ ಬಂದಾಗಲೂ ಗಂಟೆ ಸುಮಾರು ಹೊತ್ತು ಮಾಲ್ಗುಡಿ ಡೇಸ್ ಮತ್ತು ಶಂಕರ್ ನಾಗ್ ವ್ಯಕ್ತಿತ್ವದ ಬಗ್ಗೆ ಮಾತುಗಳು ನಡೆಯಿತು ಶಂಕರ್ ಚೆನ್ನೈ ನಲ್ಲೇ ಎಲ್ಲಿಯ ತನಕ ಸಿನಿಮಾ ಕೆಲ್ಸಗಳಾಗಬೇಕು . ಬೆಂಗಳೂರಿಗೆ ಯಾಕೆ ಬರಬಾರದು ಎಂದು ಬೆಂಗಳೂರಿನಲ್ಲಿ ಸ್ಟುಡಿಯೋ ನಿರ್ಮಿಸಿದ ಮೊದಲ ಕಲಾವಿಧ ನಿರ್ದೇಶಕ . ಅಣ್ಣವ್ರನ್ನೇ ಆಗಿನ ಕಾಲದಲ್ಲಿ ನಿರ್ದೇಶನ ಮಾಡಿರುವ ಹೆಗ್ಗಳಿಕೆ ಶಂಕ್ರಣ್ಣರವರದು . ಬೆಂಗಳೂರು ಮುಂದುವರಿಬೇಕು ಎಂದು ಎಂಬತ್ತರ ದಶಕದಲ್ಲೇ ಕನಸುಗಳನ್ನು ಕಟ್ಟಿಕೊಂಡು ವಿದೇಶಗಳನ್ನು ಅಡ್ಡಾಡಿ ಮಾಸ್ ಟ್ರಾನ್ಸ್ಪೋರ್ಟ್ ಉತ್ತಮ ವಾಗಿರಬೇಕು ಎಂಬುದನ್ನು ಅರಿತು ಅಂಡರ್ಗ್ರೌಂಡ್ ಮೆಟ್ರೋ ಬಗ್ಗೆ ಅಂದಿನ ಮುಖ್ಯ ಮಂತ್ರಿಗಳಾದ ರಾಮಕೃಷ್ಣ ಹೆಗ್ಗಡೆಯವರಿಗೆ ವರದಿ ಕೊಟ್ಟಿದ್ದ ವಿಷಯ ಕರ್ನಾಟಕಕ್ಕೇ ತಿಳಿದಿದೆ . ಶಂಕರ್ ನಾಗ್ ಕಾಲವಾದಾಗ ನನಗೆ ೧೫ ವರ್ಷ . ಇವತ್ತಿಗೂ ಸಾವಿರಾರು ಆಟೋಗಳ ಮೇಲೆ ಶಂಕ್ರಣ್ಣನ ಫೋಟೋ ನೋಡಿ ಸಂತೋಷವಾಗುತ್ತೆ. ಅಂತ ಆಟೋ ಮಾಲೀಕರ ಜೊತೆ ನಾನು ಅವರ ಬಗ್ಗೆ ಆಟೋ ಪ್ರಯಾಣ ಮಾಡುವಾಗ ಮಾತಾಡೋದು ಅಭ್ಯಾಸ.

ಇನ್ನು ಅಣ್ಣಾವ್ರು ಕಾಲವಾದ ವಿಷಯ ತಿಳ್ಸ್ತೀನಿ , ೨೦೦೬ ನೇ ಇಸವಿ . ಬೆಂಗಳೂರಿನಲ್ಲಿ ಸಾಫ್ಟ್ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದೆ . ವಿಷಯ ಹೀಗೆ ಅಂತ ತಿಳೀತು . ವಿಪರೀತ ದುಃಖ ಹಲವಾರು ದಿವಸಗಳು ನನ್ನೊಳಗೆ ಸೂತಕದ ಛಾಯೆ ಆವರಿಸಿಕೊಂಡಿತ್ತು. ಅವರ ಚಿತ್ರಗಳನ್ನು ಒಮ್ಮೆ ನೋಡಿದರೆ ಸಾಕು ನಮ್ಮವರೇ ಅನ್ನೋ ಅವನೀಯ ಸಂಭಂದ ಹುಟ್ಟಿಕೊಳ್ಳುತಿತ್ತು. ಬೆಂಗಳೂರಿನಲ್ಲಿ ಸ್ವಲ್ಪ ಗಲಾಟೆ ಕಲ್ಲು ತೂರಾಟ ನಡೆದುಹೋಯ್ತು. ಒಳ್ಳೆಯ ಕೆಲಸ ಮಾಡಿದ್ದು ಅಂದ್ರೆ ಶಾಲಾ ಕಾಲೇಜು ಸೇರಿದಂತೆ ಪ್ರೈವೇಟ್ ಕಂಪನೀಸ್ ಗೆ ರಜೆ ಘೋಷಿಸಿದ್ದರು. ಮನೆಯಲ್ಲೇ ಕುಳಿತು ರಾಜಣ್ಣನ ಪಾರ್ಥಿವ ಶರೀರ ನೋಡಿ ದುಃಖದಿಂದಲೇ ಆ ದಿನಗಳು ಕಳೆದಿದ್ದಾಯಿತು. ಪೌರಾಣಿಕ ಭಕ್ತಿ ಪ್ರಧಾನ ಚಿತ್ರಗಳನ್ನು ಭಾರತ ದೇಶದಲ್ಲೇ ರಾಜಕುಮಾರ ರೀತಿ ನಟಿಸುತ್ತಿದ್ದ ಇನ್ನೊಬ್ಬ ನಟ ಇಲ್ಲ .ಅಷ್ಟು ಮನಸ್ಸಿಗೆ ಛಾಪು ಒಪ್ಪಿದ ಹಾಗೆ ಉಳಿದಿರೋದೇ ಅಣ್ಣಾವ್ರ ಚಿತ್ರಗಳು.

ಪುಟ್ಟಣ್ಣರವರು ಹೆಕ್ಕಿ ತೆಗೆದ ಅತ್ಯುತ್ತಮ ಕಲಾವಿಧರು ವಿಷ್ಣುವರ್ಧನ್ ಮತ್ತು ಅಂಬರೀಷ್ರವರು. ಅಣ್ಣಾವ್ರ ಜೊತೆ ಜೊತೆಯಲ್ಲೇ ವಿಷ್ಣುವರ್ಧನ್ ಸಿನಿಮಾ ರಂಗದಲ್ಲಿ ಮಾಡಿದ ಸಾಧನೆ ಮರೆತರೆ ನಾವು ಕನ್ನಡಿಗರೇ ಅಲ್ಲ . ಆ ಮಟ್ಟಕ್ಕೆ ಸಾಧನೆ ಮಾಡಿದ ಕಲಾವಿಧ ವಿಷ್ಣುವರ್ಧನ್.
ಮೊನ್ನೆ ಶನಿವಾರ ರಾತ್ರಿ ಅಂಬರೀಷ್ ಕಾಲವಾದಾಗಲೂ ವಿಪರೀತ ದುಃಖವಾಯಿತು. ಮೈಸೂರಿನಲ್ಲಿ ನಾನು ಆರನೇ ಏಳನೇ ತರಗತಿಯಲ್ಲಿ ಓದುತ್ತಿದ್ದಾಗ ಅವರ "ಚಕ್ರವ್ಯೂಹ" ಸಿನಿಮಾ ತೆರೆ ಕಂಡಿತ್ತು . ನಮ್ಮ ನೆಂಟರು ಸಿನಿಮಾಕ್ಕೆ ಕರ್ಕೊಂಡು ಹೋಗುತ್ತಿದ್ರು. ಶಾಲೆಯಲ್ಲಿ ವಾರಕ್ಕೆ ಒಮ್ಮೆ ಕಡೆ ಪಿರಿಯಡ್ ಅಲ್ಲಿ ಪಾಠ ಮಾಡಲು ಬೇಜಾರಾದಾಗ ಟೀಚರ್ ಹಾಡು ಹಾಡಿಸುತ್ತಿದ್ದರು. ಒಂದು ದಿನ ಹೀಗೆ ಹಾಡು ಹಾಡೋ ಸುಬ್ರಮಣ್ಯ ಎಂದು ನಮ್ಮ ಟೀಚರ್ ಕರೆದರು. ಧೈರ್ಯವಾಗಿ ಹೋಗಿ ನಿಂತು ಚಕ್ರವ್ಯೂಹ ಇದು ಚಕ್ರವ್ಯೂಹ ಹಣದ ಮೋಹ ಅಧಿಕಾರದ ದಾಹ ಹಾಡು ಹಾಡಿದೆ . ನಮ್ಮ ಟೀಚರ್ ಕೂಡ ಸಂತೋಷ ಪಡುತ್ತಿದಿದ್ದು ಅವರ ಕಣ್ಣಲ್ಲಿ ಗಮನಿಸುತ್ತಿದ್ದೆ. ಅಲ್ಲಿಂದ ಶುರುವಾದ ಪ್ರೀತಿ ಮೊನ್ನೆ ಮೊನ್ನೆ ವಸತಿ ಸಚಿವರಾಗಿ ಸರ್ಕಾರದಿಂದ ಹೊರಬರುವವರೆಗೂ ಅವರು ಮಾಡಿದ ಕೆಲಸಗಳು ಎಷ್ಟೊಂದು ಜನರಿಗೆ ಸಹಾಯ ಮಾಡುತ್ತಿದ್ದ ರೀತಿ ಎಲ್ಲವೂ ಗಮನಿಸಿದ್ದೆ. ಅವರಿಗೇನಾದರೂ ನಮ್ಮ ಮನೆಯವರಿಗೆ ಏನೋ ಆದಂತೆ ಅನಿಸುವುದು ಸಹಜ. ಮಂಡ್ಯ ಜನರು ಎಷ್ಟು ಪ್ರೀತಿ ಇಟ್ಟುಕೊಂಡಿದ್ರು ಎಂದು ನಾನು ಮಂಡ್ಯದಲ್ಲಿ ಇಂಜಿನಿಯರಿಂಗ್ ಮಾಡುವ ಸಮಯದಲ್ಲಿ ಕಂಡಿದ್ದೇನೆ . ಮಂಡ್ಯ ಕ್ಷೇತ್ರ ಬಿಟ್ಟು ಎಲ್ಲೂ ಚುನಾವಣೆಗೆ ಅವರು ನಿಲ್ಲಲಿಲ್ಲ . ಕರ್ನಾಟಕದಲ್ಲಿ ಎಲ್ಲಿ ನಿಂತು ಗೆದ್ದು ಬರುವ ಪ್ರೀತಿ ವಿಶ್ವಾಸ ಜನರಿಂದ ಪಡೆದುಕೊಂಡಿದ್ದ ವ್ಯಕ್ತಿ.
ಇಡೀ ದಿನ ಟೀ ವಿ ಮುಂದೆ ಕುಳಿತು ದುಃಖಿಸುತ್ತಿದ್ದೆ. ನಾನು ಅವರ ಹಾಡು ಹಾಡುತ್ತಿದ್ದ ಬಗ್ಗೆ ಎಲ್ಲಾ ಮಕ್ಕಳಿಗೆ ತಿಳಿಸಿಕೊಟ್ಟೆ. ಜನರ ಪ್ರೀತಿ ಹೇಗೆ ಸಂಪಾದನೆ ಮಾಡಿದರು ಅನ್ನುವ ವಿಷಯ ಮಕ್ಕಳಿಗೆ ತಿಳಿಸಿಕೊಟ್ಟೆ . ಎಷ್ಟು ಜನರ ಮನಸ್ಸಿನಲ್ಲಿ ಪ್ರೀತಿ ಸಂಪಾದಿಸಿ ಬೇರೂರಿದ್ದರು ಅನ್ನುವ ವಿಷಯ ಮರಣ ಬಂದಾಗಲೇ ತಿಳಿಯುವುದು .

ಸರ್ಕಾರದಲ್ಲಿದ್ದಾಗ ಅಂಬರೀಷ್ ರವರು ವಿಷ್ಣು ಸ್ಮಾರಕ ವಿಷಯವಾಗಿ ಹಲವಾರು ಮೀಟಿಂಗ್ ಅಲ್ಲಿ ಭಾಗವಸಿದ್ದರು .ಬಹಿರಂಗವಾಗಿ ವಿಷ್ಣುಗೆ ಹೀಗೆ ಕಷ್ಟವೇ ಆಯಿತು ಅವನ ಜೀವನ ಇದ್ದಾಗ್ಲೂ ಕಷ್ಟ ಪಟ್ಟ ಹೋದಾದ್ಮೇಲೂ ಇದೇ ಕಥೆ ಅನ್ನೋ ನೋವಿನ ಮಾತು ಜನತೆಗೆ ತಿಳಿಸಿದ್ದರು. ವಿಷ್ಣುವರ್ಧನ್ ಸ್ಮಾರಕ ಕೆಲ್ಸದಲ್ಲಿ ೯ ವರ್ಷಗಳಿಂದ ಸರ್ಕಾರಗಳು ಎಡವಿರುವುದು ಎದ್ದು ಕಾಣುತ್ತಿದೆ . ಇದು ಒಬ್ಬ ನಾಯಕ ನಟರ ಅಭಿಮಾನಿಗಳ ಪ್ರಶ್ನೆ ಅಲ್ಲ , ಇದು ಕರ್ನಾಟಕದ ಗೌರವದ ಪ್ರಶ್ನೆ . ವಿಷ್ಣುವರ್ಧನ್ರವರ ಸ್ಮಾರಕದ ವಿಚಾರವಾಗಿ ಭಾರತಿಯವರು ಏನು ಇಷ್ಟಪಡುತ್ತಾರೋ ಹಾಗೆ ನಡೆಸಿದರೆ ಸರ್ಕಾರಕ್ಕೆ ಹೆಚ್ಚಿನ ಗೌರವ ಸಲ್ಲುವುದು .ಕರ್ನಾಟಕಕ್ಕೆ ಗೊತ್ತು ಅವರ ಸ್ನೇಹ ಎಷ್ಟು ಆತ್ಮೀಯವಾಗಿತ್ತು ಎಂದು. ಅಂಬರೀಷ್ ಬದುಕಿದ್ದಾಗ ಕೂಡ ಭಾರತಿಯವರು ಏನು ಬಯಸುತ್ತಾರೋ ಆ ರೀತಿಯೇ ಸ್ಮಾರಕ ಕೆಲಸ ನಡೆಯಬೇಕು ಎಂದು ತಿಳಿಸಿದ್ದರು . ಕಲೆಗೆ ಸಂಭಂದಪಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ನಟರೆಲ್ಲರ ಹೆಸರಲ್ಲಿ ನಡೆಯಬೇಕು, ಅಕಾಡೆಮಿ ಸ್ಪಾಪಿಸಿ ಅದರಡಿಯಲ್ಲಿ ಹಲವಾರು ಕೆಲಸ ಶುರುವಾಗಬೇಕು. ಕುಮಾರಣ್ಣ ಚಿತ್ರಗಳ ನಿರ್ಮಾಪಕರು ಮತ್ತು ಹಂಚಿಕೆದಾರರು ಹೌದು . ಈ ಕೆಲಸ ಮಾಡಲು ಸಾಧ್ಯವಿರುವ ಮುಖ್ಯಮಂತ್ರಿಗಳವರು. ದಯವಿಟ್ಟು ಈ ಕೆಲಸ ಬೇಗ ಮಾಡಿಕೊಡಿ. ಈಗಾಗಲೇ ೯ ವರ್ಷ ತಡವಾಗಿರುವುದು ಗಮನಿಸಬೇಕಾದ ವಿಷಯ. ಅಭಿನಂದಸಲೇಬೇಕಾದ ವಿಷಯ ಏನೆಂದರೆ ಅಂಬರೀಷ್ ರವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ತುಂಬಾ ಕಾಳಜಿ ವಹಿಸಿ ಸುಸೂತ್ರವಾಗಿ ನೆರವೇರಿಸಿ ಜನಗಳ ಹೃದಯದಲ್ಲಿ ಮಾನ್ಯ ಮುಖ್ಯಮಂತ್ರಿಗಳು ವಿಶೇಷವಾದ ಸ್ಥಾನಮಾನವನ್ನು ಗಳಿಸಿರುತ್ತಾರೆ . ಅವರಿಗೆ ತುಂಬು ಹೃದಯದ ಅಭಿನಂದನೆಗಳು . ಅಂಬರೀಷ್ ರವರು ಇದ್ದಾಗಲೇ ವಿಷ್ಣು ಸ್ಮಾರಕ ಆಗಿದ್ದರೆ ತುಂಬಾ ಸಂತೋಷ ಪಡುತ್ತಿದ್ದರು. ಹಳೆಯದ್ದು ಏನೇ ಕಾರಣವಿರಲಿ ಅದನ್ನು ಎಲ್ಲರೂ ಮರೆತರೆ ಒಳ್ಳೆಯದು. ಈ ಸ್ಮಾರಕ ಕೆಲಸಕ್ಕೆ ತುಂಬಾ ಸರಿಯಾದ ಸಮಯ ಒದಗಿ ಬಂದಿದೆ ಎಂದು ಅನಿಸುತ್ತಿದೆ. ಸುದೀಪ್ರವರು ಸ್ಮಾರಕ ಕಾರ್ಯ ನಿರ್ವಹಿಸುವ ತಂಡದ ಅಧ್ಯಕ್ಷತೆ ವಹಿಸುರುವುದು ಸ್ವಾಗತಾರ್ಹ .

No comments:

Post a Comment