Thursday, March 3, 2016

ಶಿವಲಿಂಗ - ಕನ್ನಡ ಚಿತ್ರದ ವರದಿ

ಶಿವಲಿಂಗ - ಕನ್ನಡ ಚಿತ್ರದ ವರದಿ:
-------------------------------------
ಒಳ್ಳೆಯ ಸಿನಿಮಾ ಕೊಟ್ಟರೆ ನಿಜವಾಗಿ ಹೇಳುತ್ತೇನೆ ಕನ್ನಡಿಗರು ಚಿತ್ರಮಂದಿರಗಳಿಗೆ ಬರ್ತಾರೆ . ಅದಕ್ಕೆ ೨೦೧೫ರ ಕೆಲವು ಸಿನೆಮಗಳನ್ನೇ ನೋಡಿ. ಮೊದಲನೇ ದಿವಸ ಮೊದಲ ವೀಕ್ಷಣೆಗೆ ನನ್ನ ಮಕ್ಕಳಿಬ್ಬರನ್ನೂ ಕರೆದುಕೊಂಡು ಸಂಸಾರ ಸಮೇತ ಹೋಗಿದ್ದೆ . ಆಪ್ತಮಿತ್ರ ಮತ್ತು ಆಪ್ತರಕ್ಷಕ ತೆಗೆದ ಪಿ ವಾಸು ನಿರ್ದೇಶನ ತುಂಬಾ ಇಷ್ಟವಾಗಿತ್ತು..ನನ್ನ ಮಕ್ಕಳು ರಂಗಿತರಂಗ ಸಿನಿಮಾದಲ್ಲಿರೋ ಥ್ರಿಲ್ ನೋಡಿ ಖುಷಿ ಪಟ್ಟಿದ್ದರು. ಆದ್ದರಿಂದ ಮನೆಯವರಿಗೆಲ್ಲಾ ಇಷ್ಟವಾಗುತ್ತದೆ ಎಂದು ನಂಬಿ ಕಥೆ ಕೇಳದೆ ಹೋಗಿ "ಶಿವಲಿಂಗ " ಸಿನಿಮಾ ನೋಡಿ ಬಂದೆವು.
ಸಿನಿಮಾ ಮನೆಯವರಿಗೆಲ್ಲಾ ಹಿಡಿಸಿದೆ. ಮುಖ್ಯವಾಗಿ ಶಿವಣ್ಣರವರಿಗೆ ತುಂಬಾ ಹೊಂದಿಕೊಳ್ಳುವಂತ ಪಾತ್ರ "ಶಿವಲಿಂಗ" - ಸಿನಿಮಾ ಹೆಸರೇ ಜನರನ್ನು ಸಿನೆಮಾಗೆ ಕರೆತರುವ ಹಾಗಿದೆ ಅದರ ಜೊತೆಗೆ ಡ್ರಾಮಾ ಮತ್ತು ಸಸ್ಪೆನ್ಸ್ ಅಂಶವಂತೂ ಕೊನೆಯತನಕ ಜನರನ್ನು ಕುರ್ಚಿಯ ತುದಿಯಲ್ಲಿ ಕೂರಿಸುವ ಹಾಗೆ ಕಥೆ ಇದೆ . 
ಎಲ್ಲಾ ವರ್ಗದ ಜನರನ್ನೂ ಚಿತ್ರಮಂದಿರಗಳಿಗೆ ತರಬೇಕಾದರೆ ಕಥೆಯೇ ಚಿತ್ರದ ರಾಜ, ಆ ಮಾತು ಇವತ್ತಿಗೂ ನಿಜ. ಇಂಥ ಒಂದು ಅದ್ಭುತ ಕಥೆಯನ್ನು ಪಿ ವಾಸುರವರು ರೋಮಾಂಚನವನ್ನು ಉಳಿಸಿಕೊಂಡು ಚೆನ್ನಾಗಿ ಹೆಣೆದಿದ್ದಾರೆ . ಕ್ಷಣ ಕ್ಷಣಕ್ಕೂ ಕುತೂಹಲ ಹೆಚ್ಚಿಸುತ್ತಾ ಹೋಗುವುದಂತೂ ಖಂಡಿತ. ದಯವಿಟ್ಟು ಯಾರನ್ನು ಕಥೆ ಬಗ್ಗೆ ಒಂದು ಸ್ವಲ್ಪವೂ ಮಾತನಾಡಿಸದೆ ಸೀದಾ ಚಿತ್ರಮಂದಿರಕ್ಕೆ ಬನ್ನಿ, ಖಂಡಿತ ನಿರಾಸೆಯಾಗುವುದಿಲ್ಲ . 
ಉತ್ತಮವಾಗಿರುವಂತ ಮೂರು ಉದಾಹರಣೆ ಹೇಳುತ್ತೇನೆ :
ಕುರ್ಚಿಯ ಮೇಲೆ ಕೂತು ಒಂದು ಪಾತ್ರ ತಿರುಗುತ್ತದೆ ಆಗ ಇನ್ನೊಂದು ಪಾತ್ರದ ಮುಖ ಅರ್ಧರ್ಧ ಇನ್ನೊಂದು ಪಾತ್ರದೊಳಗೆ ಬಂದು ಹೋಗುತ್ತದೆ . ಕನ್ನಡದಲ್ಲಿ ನಾನು ಈ ರೀತಿ ನೋಡಿದ್ದು ಇದೇ ಮೊದಲು. ಇನ್ನೊಂದು ಹೊಸತನ ಪಾತ್ರದ ಹೊಡೆದಾಡುವ ಸನ್ನಿವೇಶದಲ್ಲಿ ಸ್ಮಾರ್ಟ್ ಫೋನ್ ಬಳಸಿಕೊಂಡಿರುವ ರೀತಿ ಹೊಡೆದಾಡುವ ದೃಶ್ಯಗಳಲ್ಲಿ ಹೊಸತನ ತುಂಬಿದೆ . 
ಸುಧಾರಣೆಯಾಗಬೇಕಿರುವ ಮೂರು ಸನ್ನಿವೇಶ ಕೂಡ ಉದಾಹರಣೆ ಕೊಡುತ್ತೀನಿ..
ಚಿತ್ರದ ನಾಯಕ ಅವಶ್ಯಕತೆಗಿಂತ ಜಾಸ್ತಿ ಹೊಡೆದಾಡುವ ಕೆಲವು ದೃಶ್ಯಗಳನ್ನು ಕತ್ತರಿ ಹಾಕುವಲ್ಲಿ ಎಡವಿದ್ದಾರೆ, ಸುಮ್ಮನೆ ೧೦ ಬೇರೆ ಬೇರೆ ಜನಕ್ಕೆ ಹೊಡೆಯಲೇ ಬೇಕೆಂದೇನಿಲ್ಲವಲ್ಲ , ೨-೩ ಜನಕ್ಕೆ ಹೊಡೆದರೆ ಸಾಕಿತ್ತು. ಚಿತ್ರದಲ್ಲಿ ಹೆಣ್ಣು ಮಕ್ಕಳು ಕತ್ತಿಗೆ ಹಾಕುವ ಸರ ನಾಯಿಯ ಕತ್ತಿಗೆ ಹಾಕುವ ರೀತಿ ವಿಪರೀತ ದಪ್ಪ ಇದೆ smile emoticon
ಪಾತ್ರಗಳು ಯಾತಕ್ಕೆ ವಿದೇಶಕ್ಕೆ ಹೋದವೋ ಹಾಡು ಹೇಳುವುದಕ್ಕೆ ಅದು ಕಥೆಯಲ್ಲಿ ಹೆಣೆಯಬೇಕು ಇಲ್ಲವಾದರೆ ಪಾತ್ರ ಸುಮ್ಸುಮ್ನೆ ಹಾಡು ಬಂದಾಗ ಯೂರೋಪ್ ಖಂಡಕ್ಕೆ ಹೋಗುವುದು ಅಷ್ಟು ಸಮಂಜಸವಲ್ಲ , ನಿಮಗೆ ಗೊತ್ತಾಯಿತು ಅನ್ಕೋತೀನಿ.
ಬೆಂಗಳೂರಿನ ಶಿವಾಜಿನಗರದ ಕನ್ನಡಕ್ಕಿಂತ ಉರ್ದು ಮಿಶ್ರಿತ ಹಿಂದಿ ಅವಶ್ಯಕತೆಗಿಂತ ಜಾಸ್ತಿ ಉಪಯೋಗವಾಗಿದೆ , ಅಷ್ಟೊಂದು ಉರ್ದು ಬೆರಕೆ ಹಿಂದಿಯ ತೂರಿಕೆ ಬೇಕಿರಲಿಲ್ಲ ಅನ್ನಿಸಿತು . 
ಒಂದು ಸಿನಿಮಾ ನೋಡಿ ಬಂದರೆ ಸಿನಿಮಾ ನೋಡಿ ಕಾಲಕ್ರಮೇಣ ಚಿತ್ರವನ್ನು ಮರೆಯಬಹುದು ಆದರೆ ಚಿತ್ರದ ಹಾಡುಗಳು ನಮ್ಮ ಪ್ರಜ್ಞೆಯಲ್ಲಿ ಖಂಡಿತ ಉಳಿಯಬೇಕು ಅಂತ ಸುಮಧುರ ಸಾಹಿತ್ಯವಿರುವ ಒಂದೆರಡು ಹಾಡಂತೂ ( ಬೊಂಬೆ ಮತ್ತು ಉಪಕಾರ ) ತುಂಬಾನೇ ಚೆನ್ನಾಗಿದೆ . ಹರಿಕೃಷ್ಣರ ಸಂಗೀತ ಮತ್ತೊಮ್ಮೆ ಜಯಭೇರಿ, ಸಾಹಿತ್ಯ ಬರೆದಿರುವ ನಾಗೇಂದ್ರ ಪ್ರಸಾದ್ ಕವಿರತ್ನರೆ. 
ನಾಯಕಿಗೆ ಬೆಳಕಿಗೆ ಬರುವುದಕ್ಕೆ ಪಾತ್ರ ಸೂಕ್ತವಾಗಿದೆ ಅದನ್ನು ವೇದಿಕಾ ಚೆನ್ನಾಗಿ ನಿಭಾಯಿಸಿದ್ದಾರೆ. ಶಕ್ತಿ ವಾಸುದೇವನ್ ಪಾತ್ರಕ್ಕೆ ಜೀವ ತುಂಬಿ ಎಲ್ಲಾ ಕನ್ನಡಿಗರಿಗೆ ಬರ್ಜರಿಯಾಗಿ ತಮ್ಮನ್ನು ಪರಿಚಯ ಮಾಡಿಕೊಂಡಿದ್ದಾರೆ . ವಿಜಯ್ ಪ್ರಕಾಶ್ರವರ ಸಿರಿಕಂಠದಿಂದ "ಎತ್ತರ ಎತ್ತರ " ಹಾಡು ಚಿತ್ರದಲ್ಲಿ ತುಂಬಾ ಸೂಕ್ತವಾಗಿ ಹೊಂದುವ ಆ ಸನ್ನಿವೇಶ ಎಲ್ಲವೂ ಮೆಚ್ಚುವಂತದ್ದು. ಸಾಧು ಕೋಕಿಲ ಅವರ ಪಾತ್ರ ಎಲ್ಲೂ ನಿಮಗೆ ತೂರಿಕೆ ಅನ್ನಿಸುವುದಿಲ್ಲ , ಹಾಸ್ಯ ಸನ್ನಿವೇಶಗಳು ಚೆನ್ನಾಗಿ ಮೂಡಿ ಬಂದಿದೆ .ಕಥೆಯಲ್ಲಿ ಪಾರಿವಾಳಕ್ಕೂ ಪಾತ್ರ ಇದೆ ಮತ್ತು ಅದೂ ಮಿಂಚಿದೆ. ಈ ಚಿತ್ರ ನಿರ್ಮಾಣ ಮಾಡಿದ ಕೆ ಎ ಸುರೇಶ್ ರವರಿಗೆ ಅಭಿನಂದಿಸಲೇಬೇಕು . ಮೈಸೂರು ಬೆಂಗಳೂರು ರೈಲನ್ನು ಹೆಲಿಕ್ಯಾಪ್ಟರ್ ನಿಂದ ಸುಮಾರು ೧ ನಿಮಿಷಗಳ ಕಾಲ ಸೆರೆ ಹಿಡಿರುವುದು ಕೆ ಹೆಚ್ ದಾಸ್ . 
ಶಿವಣ್ಣರ ಆನಂದ್ ಮೈಸೂರಿನ ಪದ್ಮ ಚಿತ್ರಮಂದಿರದಲ್ಲಿ ನೋಡಿದ್ದೆ. ಆಗ ಹೇಗೆ ಕುಣಿದಿದ್ದರೋ ಈಗಲೂ ಅವರ ನೃತ್ಯ ಮಾಸಿಲ್ಲ ಅದೇ ಉತ್ಸಾಹ ಎದ್ದು ಕಾಣುತ್ತದೆ "ಆನಂದ್ " ಚಿತ್ರದಿಂದ ಶುರು ಮಾಡಿ ಮೂವತ್ತು ವರುಷದಿಂದ ನಟನೆ ಮತ್ತು ಅದ್ಧೂರಿ ನೃತ್ಯ ಮಾಡಿಕೊಂಡು ರಂಜಿಸಿದ ಡಾ।। ಶಿವರಾಜಕುಮಾರ C.I.D ಪಾತ್ರದ ಚೌಕಟ್ಟಿನೂಳಗೆ ಹೆಚ್ಚು ಮಿಂಚಿರುತ್ತಾರೆ . ಮಾತುಗಳನ್ನು ಸಾಕಷ್ಟು ನಿಧಾನವಾಗಿ ಆಡಿದ್ದಾರೆ. ಶಿವಣ್ಣರ ನಟನೆ ತುಂಬಾ ಸ್ವಾಭಾವಿಕವಾಗಿದೆ ಮತ್ತು ಅವರಿಗೆ ಹೇಳಿ ಮಾಡಿಸಿದ ಚಿತ್ರ ಮತ್ತು ಪಾತ್ರ . 
ಶಿವಣ್ಣ , ನಿಮ್ಮ ಒಳಗಿರುವ ಆತ್ಮವಿಶ್ವಾಸ ಮತ್ತು ಜೀವನೋತ್ಸಾಹ ಚಿತ್ರದಲ್ಲಿ ಎದ್ದು ಕಾಣಿಸುತ್ತದೆ . ಕೆಲವು ದೃಶ್ಯಗಳಲ್ಲಿ ನಿಮ್ಮ ಮಾತು ಮತ್ತು ಹಾವಾಭಾವಗಳಲ್ಲಿ ನಮ್ಮ ಅಣ್ಣಾವ್ರು ಕಾಣಿಸುತ್ತಾರೆ ಮತ್ತು ಕೇಳಿಸುತ್ತಾರೆ, ಸೂಕ್ಷ್ಮವಾಗಿ ಗಮನಿಸಬೇಕಷ್ಟೆ .
ಒಟ್ಟಾರೆ "ಶಿವಲಿಂಗ " - ಕನ್ನಡ ಪ್ರೇಕ್ಷರಿಗೆ ಮಾತ್ರವಲ್ಲ ನಮ್ಮ ದೇಶದವರೆಲ್ಲಾ ಒಂದು ಬಾರಿ ನೋಡಬಹುದು. ಹತ್ತಕ್ಕೆ ಎಂಟುವರೆ ಅಂಕಗಳು ಕೊಡುತ್ತಿದ್ದೇನೆ ಮತ್ತು ಅಮೆರಿಕನ್ನಡಿಗರನ್ನು ಚಿತ್ರಮಂದಿರಕ್ಕೆ ಕರೆಯುತ್ತಿದ್ದೇನೆ . ಪಿ ವಾಸು ಮತ್ತು ಚಿತ್ರತಂಡದವರಿಗೆ ಅಭಿನಂದನೆಗಳು.

No comments:

Post a Comment